ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ' ಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ


ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಓರಿಯೆಂಟೇಶನ್ ಕಾರ್ಯಕ್ರಮದ ಮೂಲಕ ದೇಶಾದ್ಯಂತದ ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು

ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ, ಸರ್ಕಾರವು ರೈತರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಒಂದು ದೊಡ್ಡ ಪ್ರಯತ್ನವನ್ನು ಮಾಡುತ್ತಿದೆ

"ನಾನು ಉಸಿರಾಡುವ ಪ್ರತಿಯೊಂದು ಉಸಿರಿನಲ್ಲೂ ಕೃಷಿ ಇದೆ, ಮತ್ತು ನನ್ನ ಅಸ್ತಿತ್ವದ ಪ್ರತಿಯೊಂದು ಕಣದಲ್ಲೂ ರೈತರಿದ್ದಾರೆ" – ಶ್ರೀ ಶಿವರಾಜ್ ಸಿಂಗ್ ಚೌಹಾಣ್

ರಾಷ್ಟ್ರಮಟ್ಟದ 'ವಿಕಸಿತ್ ಕೃಷಿ ಸಂಕಲ್ಪ ಅಭಿಯಾನ'ವು ಫಲಿತಾಂಶಗಳನ್ನು ಗುರಿಯಾಗಿಟ್ಟುಕೊಂಡ ಕಾರ್ಯಕ್ರಮ – ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಮೋದಿ ಸರ್ಕಾರವಿರುವವರೆಗೆ ಕೃಷಿ ಸಂಶೋಧನೆಗೆ ಹಣದ ಕೊರತೆ ಇರುವುದಿಲ್ಲ – ಶ್ರೀ ಚೌಹಾಣ್

ನಮ್ಮ ಕೃಷಿ ಸಂಸ್ಥೆಗಳು ಇಡೀ ವಿಶ್ವವೇ ಗುರುತಿಸುವಂತಹ ಸಾಮರ್ಥ್ಯವನ್ನು ಹೊಂದಿವೆ – ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಮೇ 29 ರಿಂದ ಜೂನ್ 12 ರವರೆಗೆ ನಡೆಯುವ ಈ ರಾಷ್ಟ್ರವ್ಯಾಪಿ ಅಭಿಯಾನವು ಸುಮಾರು 1.5 ಕೋಟಿ (15 ಮಿಲಿಯನ್) ರೈತರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲಿದೆ

Posted On: 24 MAY 2025 9:22PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಸಿದ್ಧತೆಗಳು ಇದೀಗ ಅಂತಿಮ ಹಂತದಲ್ಲಿವೆ. ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಮೇ 29 ರಂದು ಒಡಿಶಾದ ಪವಿತ್ರ ಭೂಮಿ ಪುರಿಯಿಂದ ಔಪಚಾರಿಕವಾಗಿ ಪ್ರಾರಂಭಿಸಲಾಗುವುದು. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಈ ಬೃಹತ್ ಉಪಕ್ರಮದ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿವೆ. ಈ ಸಿದ್ಧತೆಗಳ ಭಾಗವಾಗಿ, ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ನವದೆಹಲಿಯ NASC ಕಾಂಪ್ಲೆಕ್ಸ್ ನಲ್ಲಿ ದೇಶಾದ್ಯಂತದ ಕೃಷಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀ ಚೌಹಾಣ್ ಅವರು ತಮ್ಮ ಭಾಷಣದಲ್ಲಿ, ರೈತರಿಗೆ ಸೇವೆ ಸಲ್ಲಿಸುವುದು, ಕೃಷಿ ಉತ್ಪಾದನೆಯನ್ನು ವರ್ಧಿಸುವುದು, ಉತ್ಪಾದನಾ ವೆಚ್ಚವನ್ನು ಇಳಿಸುವುದು, ಆಹಾರ ಭದ್ರತೆಯನ್ನು ಖಾತ್ರಿಪಡಿಸುವುದು, ರಾಷ್ಟ್ರದ ಆಹಾರ ಕಣಜವನ್ನು ತುಂಬುವುದು, ಹಾಗೂ ಮುಂದಿನ ಪೀಳಿಗೆಯ ಕೃಷಿ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುವುದಾಗಿ ತಿಳಿಸಿದರು. ಅಲ್ಲದೆ, ಸಮತೋಲಿತ ಗೊಬ್ಬರಗಳ ಬಳಕೆ, ಸ್ಥಳೀಯ ಪರಿಸ್ಥಿತಿಗಳ ಸೂಕ್ತ ಅರಿವು, ನಿಖರ ಸಂಶೋಧನಾ ಒಳನೋಟಗಳ ಸದ್ಬಳಕೆ ಮತ್ತು ಶ್ರೇಷ್ಠ ದರ್ಜೆಯ ಬೀಜಗಳ ಲಭ್ಯತೆಯು ರೈತರು ತಮ್ಮ ಫಸಲನ್ನು ಹೆಚ್ಚಿಸಲು ಖಂಡಿತವಾಗಿಯೂ ನೆರವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಸಹಯೋಗದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಚೌಹಾಣ್ ಅವರು, ಈ ಅಭಿಯಾನವು ವಿಜ್ಞಾನಿಗಳು, ಇಲಾಖಾ ಅಧಿಕಾರಿಗಳು ಮತ್ತು ರೈತರನ್ನು ಒಂದುಗೂಡಿಸುವ ಮಹತ್ವದ ಹೆಜ್ಜೆಯಾಗಿದೆ. ಈ ಸಮನ್ವಯವು ಬಹಳ ಕಾಲದಿಂದ ಇರಲಿಲ್ಲ. ಅವರು ಮುಂದುವರಿಸಿ, "ಕೃಷಿ ಹೃದಯ ಮತ್ತು ಭಾವನೆಯ ವಿಷಯ, ಅದನ್ನು ಅನುಭವಿಸಬೇಕು" ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೃಷಿ ಸಂಶೋಧನೆಗೆ ಸರ್ಕಾರವು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಖಚಿತಪಡಿಸಿದರು. ಸಂಶೋಧನೆ ಹಾಗೂ ನಾವೀನ್ಯತೆಗೆ ಹಣದ ಕೊರತೆ ಆಗುವುದಿಲ್ಲ ಎಂದು ಭರವಸೆ ನೀಡಿದರು. 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವು ಫಲಿತಾಂಶ-ಆಧಾರಿತ ಕಾರ್ಯಕ್ರಮವಾಗಿದ್ದು, ಇದರಿಂದ ಹೆಚ್ಚಿದ ಇಳುವರಿ ಮತ್ತು ಕಡಿಮೆ ವೆಚ್ಚದ ಫಲಗಳು ಖಾರಿಫ್ ಋತುವಿನಲ್ಲೇ ಕಾಣುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ವಿಜ್ಞಾನಿಗಳು ತಮ್ಮ ಸಂಶೋಧನಾ ಸಾಮರ್ಥ್ಯವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಬೇಕೆಂದು ಸಚಿವರು ಕರೆ ನೀಡಿದರು. ಭಾರತದ ಕೃಷಿ ಸಂಸ್ಥೆಗಳು ಜಾಗತಿಕ ಮನ್ನಣೆ ಪಡೆಯುವ ಶಕ್ತಿ ಮತ್ತು ಶ್ರೇಷ್ಠತೆಯನ್ನು ಹೊಂದಿವೆ ಎಂದು ಅವರು ಪ್ರತಿಪಾದಿಸಿದರು. ಕೃಷಿ ವಿಜ್ಞಾನಿಗಳ ಸಮರ್ಪಣಾ ಮನೋಭಾವವನ್ನು ಅವರು ಶ್ಲಾಘಿಸಿದರು. ಈ ಅಭಿಯಾನ ಯಶಸ್ವಿಯಾಗಿ ಮುಗಿದ ನಂತರ ದೇಶವು ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು.

ಈ ಅಧಿವೇಶನದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಶ್ರೀ ದೇವೇಶ್ ಚತುರ್ವೇದಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ (DARE) ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ICAR) ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್, ICAR ನ ಉಪ ಮಹಾನಿರ್ದೇಶಕ (ಕೃಷಿ ವಿಸ್ತರಣೆ) ಡಾ. ರಾಜ್ಬೀರ್ ಸಿಂಗ್, ICAR ನ ಎಲ್ಲಾ 113 ಸಂಸ್ಥೆಗಳ ಪ್ರತಿನಿಧಿಗಳು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಮತ್ತು 731 ಕೃಷಿ ವಿಜ್ಞಾನ ಕೇಂದ್ರಗಳು (KVK ಗಳು) ಹಾಗೂ ವಿವಿಧ ಕೇಂದ್ರ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಮತ್ತು ಬೋಧಕರು ಖುದ್ದಾಗಿ ಮತ್ತು ಆನ್ಲೈನ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಶ್ರೀ ಚತುರ್ವೇದಿ ಅವರು, ಭಾರತವು 210 ಮಿಲಿಯನ್ ಹೆಕ್ಟೇರ್ ನಿವ್ವಳ ಕೃಷಿ ಭೂಮಿಯನ್ನು ಹೊಂದಿದೆ ಎಂದು ತಿಳಿಸಿದರು. ಉತ್ಪಾದಕತೆಯಲ್ಲಿ ಪ್ರತಿ ಹೆಕ್ಟೇರ್ ಗೆ ಕೇವಲ ಒಂದು ಕ್ವಿಂಟಾಲ್ನಷ್ಟು ಉತ್ಪಾದನೆ ಹೆಚ್ಚಳವಾದರೂ, ಒಟ್ಟಾರೆ ಕೃಷಿ ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆಯಾಗಬಹುದು ಎಂದರು.

ಕಾರ್ಯಕ್ರಮದ ಗುರಿಯ ಬಗ್ಗೆ ಮಾತನಾಡಿದ ಡಾ. ಜಾಟ್ ಅವರು, ಈ ಅಭಿಯಾನವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಬೇಡಿಕೆಗೆ ಅನುಗುಣವಾದ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತದೆ ಎಂದು ವಿವರಿಸಿದರು. ಸಂಶೋಧನೆ ಮತ್ತು ಅದರ ಅನುಷ್ಠಾನದ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಹಾಗೂ ಎಲ್ಲರನ್ನೂ ಒಳಗೊಂಡ ಮತ್ತು ನಿರಂತರವಾದ ಅಭಿವೃದ್ಧಿಗಾಗಿ ರೈತರು ಮುನ್ನಡೆಸುವ ಹೊಸ ಆವಿಷ್ಕಾರಗಳನ್ನು ಬೆಳೆಸಿ ವಿಸ್ತರಿಸುವುದು ಇದರ ಉದ್ದೇಶವಾಗಿದೆ ಎಂದರು. ಸರಬರಾಜು ಆಧಾರಿತ ಸಂಶೋಧನೆಯ ಕಾಲ ಮುಗಿದಿದೆ, ಇನ್ನು ಮುಂದೆ ಬೇಡಿಕೆ ಆಧಾರಿತ ಸಂಶೋಧನೆಗೆ ಗಮನ ಕೊಡಬೇಕು ಎಂದು ಡಾ. ಜಾಟ್ ಅಭಿಪ್ರಾಯಪಟ್ಟರು. ಕೃಷಿ ಸಂಶೋಧನೆಗೆ ತನ್ನದೇ ಆದ ಶೈಲಿಯಿದೆ, ಅದನ್ನು ರೈತರಂತಹ ಅಂತಿಮ ಬಳಕೆದಾರರಿಗೆ ಅರ್ಥವಾಗುವ ರೀತಿಯಲ್ಲಿ, ವೈಜ್ಞಾನಿಕವಾಗಿ ನಿಖರವಾದ ಪ್ರಾಯೋಗಿಕ ರೂಪಕ್ಕೆ ತರುವುದು ಒಂದು ಸವಾಲು. ಈ ಕಾರ್ಯಕ್ರಮವು ಎಲ್ಲ ಸಂಬಂಧಪಟ್ಟವರ ಒಗ್ಗೂಡಿದ ಮತ್ತು ವ್ಯವಸ್ಥಿತ ಪ್ರಯತ್ನಗಳ ಮೂಲಕ ಆ ಗುರಿಯನ್ನು ಸಾಧಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವು 2025ರ ಮೇ 29 ರಿಂದ ಜೂನ್ 12 ರವರೆಗೆ 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಡೆಯಲಿದೆ. ವಿಜ್ಞಾನಿಗಳ ತಂಡವು ಗ್ರಾಮದಿಂದ ಗ್ರಾಮಕ್ಕೆ ಪ್ರಯಾಣಿಸಿ, ರೈತರೊಂದಿಗೆ ನೇರ ಸಂವಾದ ನಡೆಸಲಿದೆ. ಈ ಅಭಿಯಾನದಲ್ಲಿ 731 ಕೃಷಿ ವಿಜ್ಞಾನ ಕೇಂದ್ರಗಳು, 113 ICAR ಸಂಸ್ಥೆಗಳು, ರಾಜ್ಯ ಮಟ್ಟದ ಇಲಾಖೆಗಳು ಮತ್ತು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಅಧಿಕಾರಿಗಳು, ಹಾಗೂ ನವೀನ ರೈತರು ಭಾಗವಹಿಸಲಿದ್ದಾರೆ. ಈ ಅಭಿಯಾನವು ದೇಶಾದ್ಯಂತ 1.5 ಕೋಟಿ (15 ಮಿಲಿಯನ್) ರೈತರನ್ನು ತಲುಪಿ ನೇರವಾಗಿ ಸಂವಹನ ನಡೆಸುವ ಗುರಿಯನ್ನು ಹೊಂದಿದೆ.

ICAR-ಭಾರತೀಯ ಕೃಷಿ ಸಂಖ್ಯಾಶಾಸ್ತ್ರ ಸಂಶೋಧನಾ ಸಂಸ್ಥೆ, ನವದೆಹಲಿಯ ನಿರ್ದೇಶಕರಾದ ಡಾ. ರಾಜೇಂದ್ರ ಪ್ರಸಾದ್ ಅವರು ವಂದನಾರ್ಪಣೆ ಮಾಡಿದರು.

 

*****


(Release ID: 2131215)
Read this release in: English , Urdu , Hindi , Tamil